ತಿಪಟೂರು: ರೈತಬೆನ್ನೆಲುಬು. ರೈತ ಆರ್ಥಿಕವಾಗಿ ಸದೃಢನಾದರೆ ದೇಶವೂ ಬಲಿಷ್ಠವಾಗುತ್ತದೆ :ಶಾಸಕ ಕೆ.ಷಡಕ್ಷರಿ .
ನಗರದ ಬಂಡಿಹಳ್ಳಿ ಬಳಿಯ ಶ್ರೀಶೈಲ ಎಂಟರ್ಪ್ರೈಸಸ್ ಆವರಣದಲ್ಲಿ ಪವರ್ ಟ್ರ್ಯಾಕ್ಟರ್ ಸಂಸ್ಥೆಯಿಂದ ಹೊಸದಾಗಿ ಬಿಡುಗಡೆಗೊಂಡ “ಯೂರೋ ಶೌರ್ಯ” ಟ್ರ್ಯಾಕ್ಟರ್ನ್ನು ನೊಣವಿನಕೆರೆ ಕಾಡಸಿದ್ದೇಶ್ವರ ಮಠದ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಮಹಾಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಪಾದಪೂಜೆಯೊಂದಿಗೆ ಲೋಕಾರ್ಪಣೆ ಮಾಡಲಾಯಿತು.

ಲೋಕಾರ್ಪಣೆ ನಂತರ ಮಾತನಾಡಿದ ಶಾಸಕ ಕೆ. ಷಡಕ್ಷರಿ ಅವರು, ರೈತರ ಆರ್ಥಿಕ ಅಭಿವೃದ್ಧಿ ದೇಶದ ಪ್ರಗತಿಗೆ ಪ್ರಮುಖವಾಗಿದ್ದು, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಹೆಚ್ಚಾಗಬೇಕು, ಟ್ರ್ಯಾಕ್ಟರ್ ಕಂಪನಿಗಳು ರೈತರಿಗೆ ಲಾಭದಾಯಕವಾಗುವ ಯಂತ್ರಗಳನ್ನು ಒದಗಿಸಿದರೆ ರೈತರಿಗೆ ಸಹಾಯವಾಗುವುದರ ಜೊತೆಗೆ ಕಂಪನಿಗಳಿಗೂ ಬೆಳವಣಿಗೆ ಸಾಧ್ಯವಾಗುತ್ತದೆ ಎಂದರು.

ಪವರ್ ಟ್ರ್ಯಾಕ್ಟರ್ ಕಂಪನಿಯ ರಾಜ್ಯ ಮುಖ್ಯಸ್ಥ ಮಹಮದ್ ಜಖಾ ಉಲ್ಲಾ ಮಾತನಾಡಿ,ಕಂಪನಿ ಸಂಸ್ಥಾಪಕರಾದ ಹೆಚ್.ಪಿ. ನಂದಾ ಅವರು ಸ್ವದೇಶಿ ತಂತ್ರಜ್ಞಾನದಿಂದ ಕೃಷಿ ಅಭಿವೃದ್ಧಿ ಸಾಧಿಸುವ ಉದ್ದೇಶದಿಂದ ಟ್ರ್ಯಾಕ್ಟರ್ ಉತ್ಪಾದನೆ ಆರಂಭಿಸಿದ್ದರು. ಕೃಷಿ ಹಾಗೂ ರೈತರಿಗೆ ಅನುಕೂಲಕರ ಯಂತ್ರೋಪಕರಣಗಳನ್ನು ತಯಾರಿಸುವುದು ನಮ್ಮ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಇದೇ ಉದ್ದೇಶದಿಂದ “ಯೂರೋ ಶೌರ್ಯ” ಟ್ರ್ಯಾಕ್ಟರ್ನ್ನು ತಿಪಟೂರಿನಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತುರುವೇಕೆರೆ ಜೆಡಿಎಸ್ ಮುಖಂಡ ವೆಂಕಟೇಶ್, ನಗರಸಭೆಯ ಮಾಜಿ ಸದಸ್ಯ ಶಶಿಕಿರಣ್, ಪವರ್ ಟ್ರ್ಯಾಕ್ಟರ್ ಕಂಪನಿಯ ಅಧಿಕಾರಿಗಳು ಪ್ರವೀಣ್ ಕಗ್ಗಟ್ಟಿ, ಶ್ರೀಶೈಲ ಎಂಟರ್ಪ್ರೈಸಸ್ ಮಾಲೀಕರಾದ ಮಹೇಂದ್ರಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





