ತಿಪಟೂರು: ಎಪಿಎಂಸಿ ಮಾರುಕಟ್ಟೆಯ ರಾಗಿ ಖರೀದಿ ಕೇಂದ್ರಕ್ಕೆ ಹೊರ ಜಿಲ್ಲೆಗಳಿಂದ ಅಕ್ರಮವಾಗಿ ರಾಗಿ ತಂದು ಮಾರಾಟ ಮಾಡಲಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಶಾಸಕ ಕೆ. ಷಡಕ್ಷರಿ ಅವರು ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ರೈತರು ಕಷ್ಟಪಟ್ಟು ಬೆಳೆದ ರಾಗಿಗೆ ನ್ಯಾಯಯುತ ಬೆಲೆ ದೊರಕಲೆಂಬ ಉದ್ದೇಶದಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ವ್ಯವಸ್ಥೆ ಮಾಡಲಾಗಿದೆ. ಆದರೆ ದಳ್ಳಾಳಿಗಳು ರೈತರ ಹೆಸರಿನಲ್ಲಿ ಹೊರ ಜಿಲ್ಲೆಗಳಿಂದ ರಾಗಿ ತಂದು ಮಾರಾಟ ಮಾಡಿದರೆ ಸ್ಥಳೀಯ ರೈತರಿಗೆ ಅನ್ಯಾಯವಾಗುತ್ತದೆ ಹಾಗೂ ಸರ್ಕಾರದ ಉದ್ದೇಶ ಹಾಳಾಗುತ್ತದೆ ಎಂದು ಹೇಳಿದರು.
ಕೂಡಲೇ ಯಾವುದೇ ಮಧ್ಯವರ್ತಿಗಳು ಹಾಗೂ ದಳ್ಳಾಳಿಗಳಿಗೆ ಅವಕಾಶ ನೀಡಬಾರದು. ಅಕ್ರಮವಾಗಿ ರಾಗಿ ಮಾರಾಟ ಮಾಡುವವರು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಅಕ್ರಮ ತಡೆಯಲು ಅಧಿಕಾರಿಗಳು ಕೈಗೊಳ್ಳುವ ಯಾವುದೇ ಕ್ರಮಕ್ಕೂ ನಾನು ಬೆಂಬಲ ನೀಡುತ್ತೇನೆ. ನಮ್ಮ ರೈತರಿಗೆ ಅನುಕೂಲವಾಗುವುದು ಮುಖ್ಯ. ಕಷ್ಟಪಟ್ಟು ಬೆಳೆದ ರೈತನಿಗೆ ನ್ಯಾಯ ದೊರಕಬೇಕು ಎಂದು ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದರು.
ರಾಗಿ ಖರೀದಿ ಅಧಿಕಾರಿ ರುದ್ರಪ್ಪ ಮಾತನಾಡಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ರಾಗಿ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಖರೀದಿ ಕೇಂದ್ರದ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ. ಕೆಲವು ದಳ್ಳಾಳಿಗಳು ರೈತರನ್ನು ಮುಂದಿಟ್ಟು ರಾಗಿ ಮಾರಾಟ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿವೆ. ಇಂತಹವರನ್ನು ಪತ್ತೆಹಚ್ಚುವುದು ಕೆಲವೊಮ್ಮೆ ಕಷ್ಟವಾಗುತ್ತಿದೆ ಅವಲತ್ತುಕೊಂಡರು.

ದಳ್ಳಾಳಿಗಳಿಗೆ ಕಡಿವಾಣ ಹಾಕಲು ಹಾಗೂ ಹೊರ ಜಿಲ್ಲೆಗಳಿಂದ ಅಕ್ರಮವಾಗಿ ರಾಗಿ ತಂದು ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಇಂತಹ ಅಕ್ರಮಗಳು ಕಂಡುಬಂದರೆ ರೈತರು ತಕ್ಷಣ ಮಾಹಿತಿ ನೀಡಬೇಕು ಎಂದು ಶಾಸಕ ಕೆ. ಷಡಕ್ಷರಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ನ್ಯಾಕೇನಹಳ್ಳಿ ಸುರೇಶ್ ಹಾಗೂ ರಾಗಿ ಖರೀದಿ ಅಧಿಕಾರಿ ರುದ್ರಪ್ಪ ಉಪಸ್ಥಿತರಿದ್ದರು.
ವರದಿ :ಮಂಜುನಾಥ್ ಹಾಲ್ಕುರಿಕೆ





