ತಿಪಟೂರು: ವಿದ್ಯಾರ್ಥಿಗಳನ್ನು ಇಳಿಸುವ ವೇಳೆ ಶಾಲಾ ಬಸ್ ಗುದ್ದಿದ ಪರಿಣಾಮ ಆಯಾ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಹಾಲ್ಕುರಿಕೆ ಗ್ರಾಮದ ನಿವಾಸಿ ಗಂಗಮ್ಮ (47) ಮೃತಪಟ್ಟ ದುರ್ದೈವಿ. ಅವರು ತರಳಬಾಳ ಬಾಳು ಇಂಟರ್ ನ್ಯಾಷನಲ್ ನಲ್ಲಿ ಆಯಾ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಸೋಮವಾರ ಬೆಳಗ್ಗೆ ಸುಮಾರು 9.30 ಗಂಟೆ ವೇಳೆಗೆ ಶಾಲಾ ಬಸ್ ವಿವಿಧ ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಕರೆತಂದು ಶಾಲಾ ಆವರಣಕ್ಕೆ ಬಂದಿತ್ತು. ಈ ವೇಳೆ ವಿದ್ಯಾರ್ಥಿಗಳನ್ನು ಇಳಿಸಲು ಗಂಗಮ್ಮ ಅವರು ಬಸ್ ಹತ್ತಿರಕ್ಕೆ ಬಂದಾಗ, ಚಾಲಕ ಬಸ್ ಅನ್ನು ಹಿಂಬದಿಗೆ ಚಲಾಯಿಸಿದ ಪರಿಣಾಮ ಗಂಗಮ್ಮ ಅವರ ಮೇಲೆ ಬಸ್ ಹರಿದಿದೆ ಎಂದು ತಿಳಿದುಬಂದಿದೆ.
ತೀವ್ರವಾಗಿ ಗಾಯಗೊಂಡ ಗಂಗಮ್ಮ ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದ್ದಾಗ ಮಾರ್ಗ ಮಧ್ಯೆ ಅವರು ಮೃತಪಟ್ಟಿದ್ದಾರೆ.
ಘಟನೆ ಸಂಬಂಧ ಹೊನ್ನವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತನಿಖೆ ಕೈಗೊಳ್ಳಲಾಗಿದೆ.
ಶಾಲಾ ಆಡಳಿತ ಮಂಡಳಿ, ಸ್ಥಳೀಯ ಮುಖಂಡರು ಹಾಗೂ ಮಾಜಿ ಶಾಸಕ ಬಿ.ನಂಜಾಮರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ತಿಳಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





