ತಿಪಟೂರು : ನಗರದ ಕೋಟೆ ಶ್ರೀ ಗುರುರಾಘವೇಂದ್ರ ಮೂಲ ಮೃತ್ತಿಕಾ ವೃಂದಾವನ ಉತ್ತರಾಭಿಮುಖ ಮುಖ್ಯಪ್ರಾಣದೇವರ ಸನ್ನಿಧಾನದಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಅವರ 431ನೇ ವರ್ಧಂತಿ ಮಹೋತ್ಸವವನ್ನು ಭಕ್ತಿ ಭಾವದಿಂದ ಅದ್ದೂರಿಯಾಗಿ ಆಚರಿಸಲಾಯಿತು.

ಕೋಟೆ ಶ್ರೀ ರಾಘವೇಂದ್ರ ಮಠದಲ್ಲಿ ಕಲ್ಪವೃಕ್ಷ, ಕಾಮಧೇನು, ಭಕ್ತರ ಅಭೀಷ್ಟ ಪ್ರದಾಯಕರಾದ ಶ್ರೀಶ್ರೀ ಗುರುರಾಘವೇಂದ್ರ ಗುರುಸಾರ್ವಭೌಮರ ವರ್ಧಂತಿ ಮಹೋತ್ಸವ ಭವ್ಯವಾಗಿ ನಡೆಯಿತು. ಮಹೋತ್ಸವದ ಅಂಗವಾಗಿ ಬೆಳಿಗ್ಗೆ 6 ಗಂಟೆಗೆ ಸುಪ್ರಭಾತ ಸೇವೆ ನೆರವೇರಿತು. ಬಳಿಕ 7 ಗಂಟೆಗೆ ಪಂಚಾಮೃತ ಅಭಿಷೇಕ, ಅಲಂಕಾರ ಹಾಗೂ ಅರ್ಚನೆ ಜರುಗಿತು.
ಬೆಳಿಗ್ಗೆ 9 ಗಂಟೆಗೆ ಶ್ರೀ ರಾಘವೇಂದ್ರ ಅಷ್ಟಾಕ್ಷರ ಹೋಮ, ಪೂರ್ಣಾಹುತಿ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿದವು. ನಂತರ ಭಕ್ತರಿಗೆ ಪ್ರಸಾದ ವಿತರಿಸಲಾಯಿತು. ಶ್ರೀ ರಾಘವೇಂದ್ರ ವೃಂದಾವನ ಟ್ರಸ್ಟ್ ಹಾಗೂ ಭಕ್ತರ ಸಹಯೋಗದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿದ್ದು, ನೂರಾರು ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಸಂಜೆಯ ವೇಳೆ ಪ್ರಾಕಾರೋತ್ಸವ, ರಥೋತ್ಸವ, ಉಯ್ಯಾಲೆ ಉತ್ಸವ, ಅಷ್ಟಾವಧಾನ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಮೋಹನ್ ಕುಮಾರ್, ಗ್ರೇಡ್–2 ತಹಸೀಲ್ದಾರ್ ಜಗನ್ನಾಥ್, ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ್ ಉಪಾಧ್ಯಾಯ, ಕಾರ್ಯದರ್ಶಿ ಪ್ರಶಾಂತ್ ಚಾತ್ರಾ, ಸದಾನಂದ ರಾವ್, ಬಾಲಣ್ಣ ಸೇರಿದಂತೆ ಅನೇಕ ಗಣ್ಯರು ಹಾಗೂ ಭಕ್ತರು ಉಪಸ್ಥಿತರಿದ್ದು ಪೂಜೆ ಸಲ್ಲಿಸಿದರು.
ವರದಿ :ಮಂಜುನಾಥ್ ಹಾಲ್ಕುರಿಕೆ





