KALPATHARU KRANTHI

ರಾತ್ರಿ ವೇಳೆ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ನಿಲುಗಡೆ ಇಲ್ಲದೆ,ರಸ್ತೆ ಬದಿಯಲ್ಲೇ ಪ್ರಯಾಣಿಕರ ಪರದಾಟ,ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ.

Spread the love

ತಿಪಟೂರು: ತಿಪಟೂರು ನಗರ ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ನಿರಂತರವಾಗಿ ಬೆಳೆಯುತ್ತಿರುವ ನಗರವಾಗಿದ್ದು, ಪ್ರತಿದಿನ ರಾಜ್ಯದ ವಿವಿಧ ಭಾಗಗಳಿಗೆ ಪ್ರಯಾಣಿಸಲು ಸಾವಿರಾರು ಪ್ರಯಾಣಿಕರು ಇಲ್ಲಿ ಬರುತ್ತಾರೆ. ಆದರೆ, ರಾತ್ರಿ ವೇಳೆಯಲ್ಲಿ ಬಸ್ ನಿಲ್ದಾಣದಲ್ಲಿ ಬಸ್‌ಗಳು ನಿಲ್ಲದೆ ರಸ್ತೆಬದಿಯಲ್ಲಿ ನಿಲ್ಲುತ್ತಿರುವುದರಿಂದ ಸಾರ್ವಜನಿಕರು ಪರದಾಡುವ ಸ್ಥಿತಿ ಉಂಟಾಗಿದು ತಿಪಟೂರು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ತಿಪಟೂರಿನಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣವನ್ನು ನಿರ್ಮಿಸಿದೆ. ಬೆಳಗಿನ ವೇಳೆ ಬಸ್‌ಗಳು ನಿಲ್ದಾಣದಲ್ಲಿ ನಿಲ್ಲುತ್ತವೆಯಾದರೂ, ರಾತ್ರಿ 8ಗಂಟೆಯ ನಂತರ ಬಸ್‌ಗಳು ನಿಲ್ದಾಣಕ್ಕೆ ಪ್ರವೇಶ ಮಾಡದೇ ಬಿ.ಹೆಚ್ ರಸ್ತೆ ಕಾಮತ್ ಹೋಟೆಲ್ ಮುಂಭಾಗ ಹಾಗೂ ವೈಭವ ಮಾಲ್ ಮುಂಭಾಗ ನಿಲ್ಲುತ್ತಿರುವುದು ಪ್ರಯಾಣಿಕರಿಗೆ ತೀವ್ರಸಮಸ್ಯೆಯಾಗಿದೆ.

ಪ್ರತಿದಿನ ತುಮಕೂರು, ಬೆಂಗಳೂರು, ಶಿವಮೊಗ್ಗ, ಮೈಸೂರು, ಹೊಸಪೇಟೆ, ಬಳ್ಳಾರಿ ಸೇರಿದಂತೆ ರಾಜ್ಯ ವಿವಿಧ ಭಾಗಗಳಿಗೆ ಹೋಗುವ ಪ್ರಯಾಣಿಕರು ಬಸ್‌ಗಾಗಿ ರಸ್ತೆಬದಿಯಲ್ಲೇ ಕಾಯಬೇಕಾಗಿದೆ. ಕೂರಲು ತಂಗುದಾಣವಿಲ್ಲ,ಮಳೆ ಮತ್ತು ಚಳಿಯಲ್ಲಿ ಮಹಿಳೆಯರು, ಮಕ್ಕಳು ಹಾಗೂ ವಯೋವೃದ್ಧರ ರಕ್ಷಣೆಗೆ ಸೂರಿಲ್ಲದೆ ಪರದಾಡುವಂತಾಗಿದೆ.ಮಳೆಧೂಳಿನ ರಕ್ಷಣೆಗಾಗಿ ಮಹಿಳೆಯರು ,ಬಾಣಂತಿ ಗರ್ಭಿಣಿಯರು,ಪ್ರಯಾಣಿಕರು,ರಸ್ತೆ ಬದಿ ಗೂಡಂಗಡಿ ಟಾರ್ಪ್ಲ್ ಕೆಳಗೆ ,ಅಂಗಡಿ ಬಾಗಿಲಲ್ಲಿ ರಕ್ಷಣೆ ಪಡೆಯುವ ದಾಯನೀಯ ಸ್ಥಿತಿಯಲ್ಲಿ ಪ್ರಯಾಣಿಕರಿದ್ದಾರೆ.

ರಾತ್ರಿ ವೇಳೆ ಅಭದ್ರತೆ:

ಬಸ್‌ಗಾಗಿ ಕಾಯುತ್ತಿರುವ ಮಹಿಳೆಯರು ಮತ್ತು ಯುವತಿಯರು ಪಾನಮತ್ತ ವ್ಯಕ್ತಿಗಳಿಂದ ಚುಡಾಯಿಸುವಂತಹ ಅನುಚಿತ ಘಟನೆಗೆ ಒಳಗಾಗುತ್ತಿರುವ ಪ್ರಕರಣಗಳು ಕೂಡ ವರದಿಯಾಗಿವೆ. ಈ ಪ್ರದೇಶದಲ್ಲಿ ಪೊಲೀಸ್ ಕಾವಲು ಅಥವಾ ಯಾವುದೇ ಭದ್ರತಾ ವ್ಯವಸ್ಥೆ ಇಲ್ಲದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ.ಚಿನ್ನಾಭರಣ,ವಡವೆ ವಸ್ತ್ರ ಧರಿಸಿರುವ ಮಹಿಳೆಯರಂತು ಭಯ ಆತಂಕದಲ್ಲಿಯೇ ಬಸ್ ಕಾಯಬೇಕು ಸ್ಪಲ್ಪ ಎಚ್ಚರ ತಪ್ಪಿದರು ಅಪಾಯಕಟ್ಟಿಟ್ಟ ಬುತ್ತಿ. ಬೆಳಗಿನ ವೇಳೆ ನಿಲ್ದಾಣದಲ್ಲಿ ಕಳ್ಳಕಾಕರರ ಬಗ್ಗೆ ಎಚ್ಚರಿಕೆ ನೀಡಿವ ಪೊಲೀಸ್ ಇಲಾಖೆ, ರಾತ್ರಿವೇಳೆ ಇಷ್ಟೆಲ್ಲ ಅವ್ಯವಸ್ಥೆಗಳಿದರೂ ,ಎಚ್ಚರಿಕೆ ಕ್ರಮಕ್ಕೆ ಮುಂದಾಗಿಲ್ಲ,

ಸೌಕರ್ಯಗಳ ನಡುವೆ ಪ್ರಯಾಣ:

ಬಸ್ ನಿಲ್ದಾಣದಲ್ಲಿ ಶೌಚಾಲಯ ಇದ್ದರೂ, ಬಸ್‌ಗಳು ನಿಲ್ದಾಣದಲ್ಲಿ ನಿಲ್ಲದ ಕಾರಣ ಶೌಚಾಲಯ ವ್ಯವಸ್ಥೆ ಲಭ್ಯವಿಲ್ಲ. ರಸ್ತೆಯ ಬದಿಯಲ್ಲಿ ಕಾಯುವ ಪ್ರಯಾಣಿಕರಿಗೆ ಶೌಚಾಲಯ ಸೌಲಭ್ಯವೂ ಇಲ್ಲದಿರುವುದು ವಯೋವೃದ್ಧರು ಹಾಗೂ ಮಹಿಳೆಯರಿಗೆ ದೊಡ್ಡ ಸಮಸ್ಯೆಯಾಗಿದೆ.ಮಳೆಗಾಲದಲಂತು,ಸಮಸ್ಯೆ ಇನ್ನೂ ಜಟಿಲವಾಗುತ್ತದೆ. ಪ್ರಯಾಣಿಕರು ತಾವು ತರುವ ಲಗೇಜ್ ಗಳನ್ನ ನೆನೆಸಿಕೊಂಡು, ತಾವೂ ಮಳೆಯಲ್ಲಿ ನೆನೆಯುವ ಬೇಕು,ಜೊತೆಗೆ ಒದ್ದೆ ಬಟ್ಟೆಯಲ್ಲಿ ಪ್ರಮಾಣ ಮಾಡುವುದು ಸರ್ವೇ ಸಾಮಾನ್ಯವಾಗಿದೆ.ಬಟ್ಟೆಗಳು ಲಗೇಜ್ ಗಳು ಮಳೆಯಲ್ಲಿ ನೆನೆದು ತೆಪ್ಪೆಯಾಗಿ ಬಸ್ ಹತ್ತಿದರೇ ಬಸ್ ಸೀಟ್ ಕೊಳೆಯಾಗಿ ಬೇರೆ ಪ್ರಯಾಣಿಕರಿಗೆ ತೊಂದರೆಯಾಗುತ್ತದೆ, ಎಂದು ಬಸ್ ಹತ್ತಿಸದೇ ರಸ್ತೆ ಬದಿಯೇ ಪ್ರಯಾಣಿಕರನ್ನ ಬಿಟ್ಟು ಹೋಗಿರುವ ಸಾಕಷ್ಟು ಉದಾಹರಣೆ ಕಾಣಬಹುದು.

ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಸಾರ್ಜವನಿಕರಿಂದ ಒತ್ತಾಯ:
ರಾತ್ರಿ ವೇಳೆಯಲ್ಲಿ ಬಸ್‌ಗಳು ನಿಲ್ದಾಣದಲ್ಲಿಯೇ ನಿಲ್ಲುವಂತೆ ಕಡ್ಡಾಯ ಮಾಡಬೇಕು. ಅಲ್ಲದೆ ಸಿಸಿಟಿವಿ ಕ್ಯಾಮೆರಾ ಹಾಗೂ ರಾತ್ರಿಕಾವಲುಗಾರರ ವ್ಯವಸ್ಥೆ ಮಾಡಿ ರಾತ್ರಿ ವೇಳೆ ಕೆ.ಎಸ್ ಆರ್ ಟಿ ಸಿ‌ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಬೇಕು ,ಮಹಿಳೆಯರು ಮಕ್ಕಳು ಸೇರಿ ಪ್ರಯಾಣಿಕರಿಗೆ ಸುರಕ್ಷತೆ ದೊರೆಯುತ್ತದೆ . ಬಸ್ ನಿಲ್ದಾಣವನ್ನು ಸಮರ್ಪಕವಾಗಿ ಬಳಸಿದರೆ ಸಾವಿರಾರು ಜನ ಪ್ರಯಾಣಿಕರಿಗೆ ಸುರಕ್ಷತೆ ದೊರೆಯುತ್ತದೆ,
.ರಸ್ತೆ ಸಾರಿಗೆ ಇಲಾಖೆ ಹಾಗೂ ಜಿಲ್ಲಾಡಳಿತ ಪ್ರಯಾಣಿಕರ ಸುರಕ್ಷತೆಗೆ ಗಮನಹರಿಸಿ ಕೆ.ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಸ್ ನಿಲುಗಡೆಗೆ ಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ:ಮಂಜುನಾಥ್ ಹಾಲ್ಕುರಿಕೆ

Exit mobile version